ಸತ್ಯ ಶುದ್ಧ ಕಾಯಕದಿಂದ ಬಂದ ದ್ರವ್ಯವನ್ನು ದಾಸೋಹಕ್ಕೆ ಸಮರ್ಪಿಸಬೇಕು : ಡಾ. ಗುರುದೇವಿ ಹುಲೆಪ್ಪನವರಮಠ

ಬಸವಾದಿ ಶರಣರು ಕೇವಲ ವಚನಕಾರರಷ್ಟೇ ಅಲ್ಲ. ಅವರು ಸ್ವತಃ ಆರ್ಥಿಕ ಚಿಂತಕರಾಗಿದ್ದರು. ವಾಮ ಮಾರ್ಗದಿಂದ ಗಳಿಸಿದ ಹಣ ಒಳ್ಳೆಯ ಕೆಲಸಕ್ಕೆ ಸಲ್ಲುವುದಿಲ್ಲ. ಬದಲಿಗೆ ಸತ್ಯ ಶುದ್ಧ ಕಾಯಕದಿಂದ ಸಂಪಾದಿಸಿದ ದ್ರವ್ಯವನ್ನು ಮಾತ್ರ ಮಾನಸಿಕ ನೆಮ್ಮದಿ ತಂದುಕೊಡುತ್ತದೆ ಇದನ್ನು ದಾಸೋಹಕ್ಕೆ ಸಮರ್ಪಿಸಬೇಕು ಎಂದು ವಿಶ್ರಾಂತ ಪ್ರಾಧ್ಯಾಪಕಿ ಹಿರಿಯ ಸಾಹಿತಿ ಡಾ. ಗುರುದೇವಿ ಹುಲೆಪ್ಪನವರ ಮಠ ಅಭಿಮತ ವ್ಯಕ್ತಪಡಿಸಿದರು.
ಅವರು ಸೋಮವಾರ ಕಾರಂಜಿ ಮಠದ 183 ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಮುಖ್ಯಸ್ಥೆ ಜಯಶ್ರೀ ಎ.ಎಮ್. ಅವರು “ಶರಣರ ಆರ್ಥಿಕ ಚಿಂತನೆಗಳು” ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಾ ಶರಣರು ಸಂಗ್ರಹ ವಿರೋಧಿಗಳಾಗಿದ್ದರು. ಯಾವ ಪ್ರಾಣಿ ಪಕ್ಷಿಗಳು ಸಹ ಇಂದಿಗೆ ನಾಳಿಗೆ ಬೇಕೆಂದು ಕೂಡಿಡುವುದಿಲ್ಲ. ಅಂದಿನ ಅನ್ನವನ್ನು ಅಂದೇ ಬೆಳೆಸಿಕೊಂಡು ಉನ್ನುವುದು ಅವುಗಳ ಸ್ವಭಾವ. ಆದರೆ ಮನುಷ್ಯ ಮಾತ್ರ ತನ್ನಲ್ಲಿ ಎಷ್ಟೇ ಹಣ, ಸಂಪತ್ತು, ಅಧಿಕಾರ, ಸ್ಥಾನಮಾನಗಳಿದ್ದರೂ ಸಂತಸ ಪಡದೆ ದುರಾಸೆಯಲ್ಲಿ ಬದುಕುತ್ತಿರುವುದು ದೇಶದ ಆರ್ಥಿಕ ವ್ಯವಸ್ಥೆಗೆ ಧಕ್ಕೆ ತರುತ್ತದೆ. ಈಗಿನ ದಿನಮಾನದಲ್ಲಿ ಶರಣರ ಆರ್ಥಿಕ ನೀತಿಯನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿಶ್ರಾಂತ ಪದ್ಯಾಪಕ ಶಂಕರ ದಳವಾಯಿ ಅವರನ್ನು ಸನ್ಮಾನಿಸಲಾಯಿತು. ಪ್ರಾರಂಭದಲ್ಲಿ ಶ್ರೀಕಾಂತ ಶಾನವಾಡ ಸ್ವಾಗತ ಮತ್ತು ಪರಿಚಯ ಮಾಡಿದರು. ಕುಮಾರೇಶ್ವರ ಸಂಗೀತ ಪಾಠಶಾಲೆಯ ಮಕ್ಕಳು ವಚನ ಪ್ರಾರ್ಥನೆ ಮಾಡಿದರು. ಉಪನ್ಯಾಸಕ ಎ.ಕೆ. ಪಾಟೀಲ ನಿರೂಪಿಸಿದರು. ನ್ಯಾಯವಾದಿ ವಿ.ಕೆ. ಪಾಟೀಲ ವಂದಿಸಿದರು.