ಯೊಗೇಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ಜಾಮೀನು ನೀಡದಂತೆ ಸಿಬಿಐ ವಾದ

ಬೆಂಗಳೂರು: ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಅವರು ಈ ಹಿಂದೆ ಜಾಮೀನು ಪಡೆಯುವ ವೇಳೆ, ನ್ಯಾಯಾಲಯ ವಿಧಿಸುವ ಎಲ್ಲ ಷರತ್ತುಗಳಿಗೆ ಬದ್ದವಾಗಿರುವುದಾಗಿ ಮುಚ್ಚಳಿಕೆ ಬರೆದುಕೊಟ್ಟು, ಬಳಿಕ ಉಲ್ಲಂಘಿಸಿದ್ದಾರೆ. ಹೀಗಾಗಿ ಮತ್ತೆ ಜಾಮೀನು ನೀಡಬಾರದು ಎಂದು ಕೇಂದ್ರ ತನಿಖಾ ದಳ (ಸಿಬಿಐ) ಹೈಕೋರ್ಟ್ಗೆ ಕೋರಿದೆ.
ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸುನೀಲ್ ದತ್ ಯಾದವ್ ಪೀಠ: ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ 15ನೇ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಜಾಮೀನು ಕೋರಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ನಡೆಸಿತು. ವಿಚಾರಣೆ ವೇಳೆ ಸಿಬಿಐ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್, ಸಾಕ್ಷಿಗಳ ವಿಚಾರಣೆಯಾಗಿರುವುದು ಬದಲಾದ ಪರಿಸ್ಥಿತಿ ಎಂದಾದರೆ ಆ ಸಾಕ್ಷಿಗಳು ಏನು ಹೇಳಿವೆ ಎಂಬುದನ್ನು ಪರಿಶೀಲಸದೇ ಜಾಮೀನು ಮಂಜೂರು ಮಾಡಬೇಕು ಎಂದಾಗುವುದಿಲ್ಲ. ಷರತ್ತು ಉಲ್ಲಂಘಿಸಿದ ಕಾರಣಕ್ಕೆ ಜಾಮೀನು ರದ್ದುಪಡಿಸಿದ ಬಳಿಕ ಏನಾಗಲಿದೆ ಎಂಬ ಅಂಶಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ತೀರ್ಪುಗಳಿಲ್ಲ ಎಂದು ಪೀಠಕ್ಕೆ ವಿವರಿಸಿದರು.![]()
ಅಲ್ಲದೇ, ಪ್ರಕರಣದಲ್ಲಿ ಇನ್ನೂ ಮೂರು ಸಾಕ್ಷಿಗಳ ವಿಚಾರಣೆ ನಡೆಯಬೇಕಿದೆ ಎಂಬ ಮಾಹಿತಿ ಒಳಗೊಂಡ ಮೆಮೊ ಸಲ್ಲಿಸಿ, ಮೆರಿಟ್ ಮೇಲೆ ನ್ಯಾಯಾಲಯಗಳು ವಿನಯ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿವೆ. ಅಲ್ಲದೇ, ಅರ್ಜಿದಾರರ ವಿರುದ್ಧ ಕೆಲವು ಸಾಕ್ಷಿಗಳು ಬೆಂಬಲಿಸಿದ್ದಾರೆ & ಕೆಲವರು ವಿರುದ್ಧವಾಗಿದ್ದಾರೆ? ಸಿಆರ್ಪಿಸಿ 164 ಹೇಳಿಕೆ ನೀಡಿದ್ದ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಸಿಪಿ ಶ್ರೇಣಿಯ ಅಧಿಕಾರಿ ಪ್ರತಿಕೂಲ ಸಾಕ್ಷಿಯಾಗಿ ಬದಲಾಗಿದ್ದಾರೆ ಎಂದು ಪೀಠಕ್ಕೆ ವಿವರಿಸಿದರು.
ಸಿಬಿಐ ತನಿಖೆ, ಆರೋಪ ಪಟ್ಟಿ ರದ್ದತಿ ಎಲ್ಲವನ್ನೂ ಪ್ರಶ್ನಿಸಿದ್ದ ವಿನಯ್ ಕುಲಕರ್ಣಿ ಅರ್ಜಿಗಳನ್ನು ಹೈಕೋರ್ಟ್ ವಜಾ ಮಾಡಿತ್ತು. ಇದನ್ನು ಸುಪ್ರೀಂ ಕೋರ್ಟ್ ಸಹ ಎತ್ತಿ ಹಿಡಿದಿದೆ. ಜಾಮೀನು ವಿನಾಯಿತಿಯಾಗಿದ್ದು, ಅರ್ಜಿದಾರರಿಗೆ ನೀಡಲಾಗಿತ್ತು. ಆದರೆ, ಷರತ್ತು ಉಲ್ಲಂಘಿಸಿರುವುದರಿಂದ ಹೊರಗಿರಲು ಅವಕಾಶವಿಲ್ಲ. ಒಂದು ಸಾಕ್ಷಿಯನ್ನು ನೀವು ಬೆದರಿಸಿರುವುದರಿಂದ ಆ ಸಾಕ್ಷಿ ವಿಚಾರಣೆಯಾಗುವವರೆಗೆ ಜೈಲಿನಲ್ಲಿರಬೇಕು ಎಂದು ಯಾವ ತೀರ್ಪು ಹೇಳಿಲ್ಲ. ಆದ್ದರಿಂದ ಜಾಮೀನು ಮಂಜೂರು ಮಾಡಬಾರದು ಎಂದು ಪೀಠಕ್ಕೆ ಮನವಿ ಮಾಡಿದರು. ವಾದ ಆಲಿಸಿದ ಪೀಠ ಮುಂದಿನ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.


