ಬಿಗ್ಬಾಸ್ -11ರ ಸ್ಪರ್ಧಿ ಜಗದೀಶ್ ಮೇಲೆ ಈ ವಿಚಾರಕ್ಕೆ ಸ್ಥಳೀಯರಿಂದ ಹಲ್ಲೆ.

ಬೆಂಗಳೂರು : ಅಣ್ಣಮ್ಮ ದೇವಿ ಕೂರಿಸುವ ವಿಚಾರದಲ್ಲಿ ಸ್ಥಳೀಯರು ಹಾಗೂ ಬಿಗ್ಬಾಸ್ -11ರ ಸ್ಪರ್ಧಿ ಹಾಗೂ ವಕೀಲ ಜಗದೀಶ್ ನಡುವೆ ಗಲಾಟೆಯಾಗಿದ್ದು, ಈ ಸಂಬಂಧ ಕೊಡಿಗೇಹಳ್ಳಿ ಠಾಣೆಯಲ್ಲಿ ದೂರು – ಪ್ರತಿದೂರು ದಾಖಲಾಗಿದೆ.
ಕೊಡಿಗೇಹಳ್ಳಿಯ ವಿರೂಪಾಕ್ಷನಗರದಲ್ಲಿ ಲಾಯರ್ ಜಗದೀಶ್ಗೆ ಸೇರಿರುವ ಕಾಂಪ್ಲೆೆಕ್ಸ್ ಇದ್ದು, ಅದೇ ರಸ್ತೆಯಲ್ಲಿ ಸ್ಥಳೀಯರು ಅಣ್ಣಮ್ಮ ದೇವಿ ಕೂರಿಸಲು ಪೆಂಡಾಲ್ ಹಾಕಿದ್ದಾರೆ. ಅದಕ್ಕೆ ಆಕ್ಷೇಪಿಸಿದ ಜಗದೀಶ್, ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗುತ್ತದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆೆ ಬಂದ ಹೊಯ್ಸಳ ಸಿಬ್ಬಂದಿ ಸ್ಥಳೀಯರ ಜತೆ ಚರ್ಚಿಸಿದ್ದಾರೆ. ಈಗಾಗಲೇ ದೇವಿಯ ಪ್ರತಿಷ್ಠಾಪನೆಗೆ ನಿರ್ಧರಿಸಲಾಗಿದೆ. ಹೀಗಾಗಿ ಪೆಂಡಾಲ್ ತೆಗೆಯಲು ಸಾಧ್ಯವಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೆಲ ಹೊತ್ತಿನ ಬಳಿಕ ಜಗದೀಶ್ ಮನೆ ಬಳಿ ಬಂದ ಸುಮಾರು 40ಕ್ಕೂ ಹೆಚ್ಚು ಮಂದಿ ಸ್ಥಳೀಯರು, ಇದೇ ವಿಚಾರವಾಗಿ ಪ್ರಸ್ತಾಪಿಸಿ ಜಗದೀಶ್ ಜೊತೆ ಜಗಳ ತೆಗೆದು ಹಲ್ಲೆಗೆ ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕೊಡಿಗೇಹಳ್ಳಿ ಠಾಣೆಯಲ್ಲಿ ದೂರು – ಪ್ರತಿದೂರು ದಾಖಲಾಗಿದೆ. ಮತ್ತೊಂದೆಡೆ ಲಾಯರ್ ಜಗದೀಶ್, ನನ್ನ ವಿರುದ್ಧ ನಡೆದ ಗಲಾಟೆಯಲ್ಲಿ ಪೊಲೀಸರ ಕೈವಾಡ ಇದೆ ಎಂದು ಆರೋಪಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.