ಒಂದೇ ದಿನದ ಅಂತರದಲ್ಲಿ ರೈಲಿಗೆ ಸಿಲುಕಿ ಯುವತಿ ಸೇರಿ ಮೂವರು ದಾರುಣ ಮರಣ..

ಬೆಂಗಳೂರು: ಒಂದೇ ದಿನ ಅಂತರದಲ್ಲಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಯುವತಿ ಸೇರಿ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಈ ಸಂಬಂಧ ಪ್ರತ್ಯೇಕ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ನಗರ ರೈಲ್ವೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬಿನ್ನಿಪೇಟೆ ಗೇಟ್ ಬಳಿ ಹಳಿ ದಾಟುತ್ತಿದ್ದ ಇಬ್ಬರು ಯುವಕರು ಚಲಿಸುತ್ತಿದ್ದ ರೈಲಿಗೆ ಬಲಿಯಾದರೆ, ಮತ್ತೊಂದು ಘಟನೆಯು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ರೈಲು ಹತ್ತುವ ಭರದಲ್ಲಿ ಕಾಲು ಜಾರಿ ಯುವತಿ ಸಾವನ್ನಪ್ಪಿದ್ದಾಳೆ.
ಬುಧವಾರ ರಾತ್ರಿ 10.30ರ ಸುಮಾರಿಗೆ ಮೈಸೂರಿನಿಂದ ಬೆಂಗಳೂರಿಗೆ ರೈಲು ಬರುವಾಗ ಬಿನ್ನಿಪೇಟೆ ಗೇಟ್ ಬಳಿ ರೈಲ್ವೆ ಟ್ರ್ಯಾಕ್ ದಾಟುತ್ತಿದ್ದ ಇಬ್ಬರು ಯುವಕರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೆ.ಪಿ. ಅಗ್ರಹಾರ ನಿವಾಸಿಗಳಾದ ಸೂರಜ್ ಹಾಗೂ ಕೇತನ್ ಸಾವನ್ನಪ್ಪಿದ ದುದೈರ್ವಿಗಳು.
ಸೂರಜ್ ಫ್ಲಿಪ್ಕಾರ್ಟ್ನಲ್ಲಿ ಡೆಲಿವರಿ ಕೆಲಸ ಮಾಡುತ್ತಿದ್ದರೆ, ಕೇತನ್ ಕೂಲಿ ಕೆಲಸ ಮಾಡುತ್ತಿದ್ದ. ಬಿನ್ನಿಗೇಟ್ ಸುತ್ತಮುತ್ತ ಸ್ಲಂ ಪ್ರದೇಶವಾಗಿದ್ದರಿಂದ ಸುಲಭವಾಗಿ ರೈಲ್ವೆ ಹಳಿ ದಾಟಬಹುದಾಗಿದೆ. ನಿನ್ನೆ ರಾತ್ರಿ ಈ ಯುವಕರಿಬ್ಬರು ಇದೇ ರೀತಿ ದಾಟುವಾಗ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ರೈಲ್ವೆ ಎಸ್ಪಿ ಡಾ. ಎಸ್.ಕೆ. ಸೌಮ್ಯಲತಾ ತಿಳಿಸಿದರು.