ಅನೈತಿಕ ಸಂಬಂಧದ ಆರೋಪದಡಿ ವ್ಯಕ್ತಿಯೋರ್ವನಿಗೆ ಚಪ್ಪಲಿ ಹಾರ ಹಾಕಿ, ಕಾಲಿಗೆ ಬೆಂಕಿ ಹಚ್ಚಿ ವಿಕೃತಿ…!

ಹಾವೇರಿ: ಅನೈತಿಕ ಸಂಬಂಧ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನಿಗೆ ಕೆಲವರು ಲೈಟ್ ಕಂಬಕ್ಕೆ ಕಟ್ಟಿಹಾಕಿ ಮನಬಂದಂತೆ ಥಳಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿರುವ ಪ್ರಕರಣ ಜಿಲ್ಲೆಯ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಗುರುವಾರ ನಡೆದಿದೆ. ಮೃತನನ್ನು ಪ್ರಕಾಶ್ ಓಲೇಕಾರ ಎಂದು ಗುರುತಿಸಲಾಗಿದೆ.
ಆರೋಪಿಗಳು ಪ್ರಕಾಶನನ್ನು ಲೈಟ್ ಕಂಬಕ್ಕೆ ಕಟ್ಟಿ ಮನ ಬಂದಂತೆ ಥಳಿಸಿದ್ದಾರೆ. ಅಲ್ಲದೇ, ಪ್ರಕಾಶ ಕೊರಳಿಗೆ ಚಪ್ಪಲಿ ಹಾರ ಹಾಕಿ, ಕಾಲಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ ಎಂದು ಆರೋಪಿಸಲಾಗಿದೆ.
”ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಂದ ಆರೋಪಿತರು ತಮ್ಮ ಮನೆಯ ಹೆಣ್ಣು ಮಕ್ಕಳೊಂದಿಗೆ ಅಕ್ರಮ ಸಂಬಂಧ ಹೊಂದಿರುವುದಾಗಿ ಅವಾಚ್ಯವಾಗಿ ಶಬ್ದಗಳಿಂದ ನಿಂದಿಸಿದ್ದಾರೆ. ಆಗ ನನ್ನ ಸಹೋದರ ಪ್ರಕಾಶ್, ಈ ರೀತಿ ಆರೋಪ ಮಾಡುವುದು ಸರಿಯಲ್ಲ, ನನಗೆ ಅವಳೊಂದಿಗೆ ಅನೈತಿಕ ಸಂಬಂಧ ಇಲ್ಲ ಎಂದಿದ್ದಾನೆ. ಆದರೆ ಕೋಪಗೊಂಡ ಆರೋಪಿಗಳು ಆತನ ಮೇಲೆ ಹಲ್ಲೆ ಮಾಡಿ, ವಿದ್ಯುತ್ ಕಂಬಕ್ಕೆ ಕಟ್ಟಿ ಮಾರಣಾಂತಿಕವಾಗಿ ಥಳಿಸಿದ್ದಾರೆ. ಇದರಿಂದ ಗಾಯಗೊಂಡ ಪ್ರಕಾಶನನ್ನು ಹಾನಗಲ್ ಆಸ್ಪತ್ರೆಗೆ ದಾಖಲು ಮಾಡಿದರೂ ಕೂಡ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ” ಎಂದು ಮೃತನ ಸಹೋದರ ಫಕ್ಕೀರೇಶ ದೂರಿನಲ್ಲಿ ಉಲ್ಲೇಖಿಸಿದ್ದಾರೆ.