ಬೆಂಗಳೂರು

ಟ್ಯಾಂಕರ್ ನಲ್ಲಿ ನೆರೆ ರಾಜ್ಯದ ತ್ಯಾಜ್ಯ: ಜಲ ಕಾಯಿದೆ ಅಡಿ ಪ್ರಕರಣ ದಾಖಲಿಸಲು ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು : ನೆರೆ ರಾಜ್ಯದಿಂದ ಅಪಾಯಕಾರಿ ದ್ರವ ತ್ಯಾಜ್ಯವನ್ನು ಟ್ಯಾಂಕರ್ ಗಳಲ್ಲಿ ತದಂದು ಮಂಗಳೂರಿನ ಚರಂಡಿ ಮತ್ತು ರಾಜಕಾಲುವೆಗೆ ಸುರಿಯಲಾಗುತ್ತಿದೆ ಎಂಬ ಮಾಧ್ಯಮ ವರದಿಗೆ ಸ್ಪಂದಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಈ ಬಗ್ಗೆ ಜಲ ಕಾಯಿದೆ ಅಡಿ ಪ್ರಕರಣ ದಾಖಲಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಕಾಸಸೌಧದಲ್ಲಿಂದು ವರದಿಗಾರರೊಂದಿಗೆ ಮಾತನಾಡಿದ ಅವರು, ಚರಂಡಿ, ರಾಜಕಾಲುವೆಗಳಿಗೆ ಸುರಿದ ದ್ರವ ತ್ಯಾಜ್ಯ, ನದಿ, ಕೆರೆ, ಸಮುದ್ರ ಸೇರಿ ಜಲ ಚರಗಳ ಮತ್ತು ಜಾನುವಾರುಗಳ ಸಾವಿಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಕೂಡಲೇ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಜಲ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಮಂಗಳೂರು ವಿಭಾಗದ ಅಧಿಕಾರರಿಗಳಿಗೆ ಸೂಚಿಸುವುದಾಗಿ ಹೇಳಿದರು.

ದ್ರವ ತ್ಯಾಜ್ಯವನ್ನು ಬತ್ತಿ ಹೋದ ಬೋರ್ ವೆಲ್ ಗಳಲ್ಲಿ, ಚರಂಡಿಗಳಲ್ಲಿ, ಕೆರೆ, ಕುಂಟೆ ಸೇರಿದಂತೆ ಯಾವುದೇ ಜಲ ಮೂಲಕ್ಕೆ ಹರಿಸುವುದು ಅಪರಾಧವಾಗಿರುತ್ತದೆ. ಈ ರೀತಿ ಕಾನೂನು ಬಾಹಿರವಾಗಿ ತ್ಯಾಜ್ಯ ಸುರಿಯುವವರ ವಿರುದ್ಧ ಪರಿಸರ ಸಂರಕ್ಷಣಾ ಕಾಯಿದೆ ಅಡಿಯಲ್ಲೂ ಕ್ರಮ ಜರುಗಿಸಲಾಗುವುದು ಎಂದರು.

ಕರ್ನಾಟಕ ಸರ್ಕಾರ ಪ್ರಕೃತಿ ಪರಿಸರ ಸಂರಕ್ಷಣೆಗೆ ಬದ್ಧವಾಗಿದ್ದು, ಈ ರೀತಿಯ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು, ಪೊಲೀಸರು ಕೂಡ ಈ ನಿಟ್ಟಿನಲ್ಲಿ ಕಾನೂನು ರೀತ್ಯ ಸೂಕ್ತ ಕ್ರಮ ಜರುಗಿಸುತ್ತಾರೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button