
ನವಲಗುಂದ: ರೈತರ ಕೃಷಿ ಸಾಗುವಳಿ ಜಮೀನಿನ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದನ್ನು ರದ್ದುಪಡಿಸುವುದು ಹಾಗೂ ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶಿಸಿರುವುದನ್ನು ಸ್ವಾಗತಿಸಿ ರೈತರು ಸಿಹಿ ಹಂಚಿ, ಸಂಭ್ರಮಾಚರಣೆ ನಡೆಸಿದರು.
ಮುಖಂಡ ಮಾಬುಸಾಬ ಯರಗುಪ್ಪಿ ಮಾತನಾಡಿ, ಇದು ರೈತರ ಹೋರಾಟಕ್ಕೆ ಸಿಕ್ಕ ಜಯ ಎಂದರು.
ರೈತ ಬಶೀರಅಹ್ಮದ ಹುನಗುಂದ ಮಾತನಾಡಿ, ಪಿತ್ರಾರ್ಜಿತ ಆಸ್ತಿಯ ಪಹಣಿಯಲ್ಲಿ ವಕ್ಫ್ ಮಂಡಳಿಯವರು 2017-18ರಲ್ಲಿ ಹಕ್ಕುಗಳು ಮತ್ತು ಋಣಗಳು ಕಾಲಂನಲ್ಲಿ ಅನಧಿಕೃತವಾಗಿ ಹೆಸರು ನಮೋದು ಮಾಡಿದ್ದು, ಈ ಕುರಿತು ರೈತರ ನೇತೃತ್ವದಲ್ಲಿ ತಹಶೀಲ್ದಾರ್ ಸುಧೀರ ಸಾಹುಕಾರ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿದ್ದು ಸ್ವಾಗತಾರ್ಹ ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಮರಿತಮ್ಮೆಪ್ಪ ಹಳ್ಳದ, ಈರಣ್ಣ ಪೂಜಾರ, ಮಾಬುಸಾಬ ಕೆರೂರ, ಲವ ಭೋವಿ, ಜಾವಿದ ಪಟವೆಗಾರ, ಸಿದ್ಧಿಸಾಬ ಟಕ್ಕೆದ, ರಾಜು ಗದಗಿನ ಇದ್ದರು.