ಬೆಳಗಾವಿಯಲ್ಲಿ ಸಡಗರ ಸಂಭ್ರಮದ ರಮಜಾನ್… ಸಾಮೂಹಿಕ ನಮಾಜ್ ಅದಾ…ಪರಸ್ಪರ ಶುಭಾಷಯ ವಿನಿಯೋಗ…

ಬೆಳಗಾವಿ: ಇಸ್ಲಾಂ ಧರ್ಮಿಯರ ಪವಿತ್ರ ಹಬ್ಬ ಈದ್-ಉಲ್-ಫಿತರ್ ಇಂದು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಣೆಗೊಳ್ಳುತ್ತಿದೆ. ಬೆಳಗಾವಿ ನಗರದಲ್ಲಿಯೂ ಇಸ್ಲಾಂ ಧರ್ಮೀಯರು ಅತ್ಯುತ್ಸಾಹದಿಂದ ರಮಜಾನ್ ಹಬ್ಬವನ್ನು ಆಚರಿಸಿದರು.
ಇಂದು ಎಲ್ಲೆಡೆ ಇಸ್ಲಾಂ ಬಾಂಧವರಿಂದ ಈದ್-ಉಲ್-ಫಿತರ್ ಅರ್ಥಾತ್ ರಮಜಾನ್ ಹಬ್ಬವನ್ನು ಅತ್ಯುತ್ಸಾಹದಿಂದ ಆಚರಿಸಲಾಗುತ್ತಿದೆ. ಒಂದು ತಿಂಗಳ ಕಾಲ ಕಠಿಣ ರೋಜಾ ಉಪವಾಸವನ್ನು ಕೈಗೊಂಡು ದೇವರಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ, ಅಂತಿಮ ದಿನ ರಮಜಾನ್ ಹಬ್ಬವನ್ನು ಆಚರಿಸಲಾಗುತ್ತದೆ. ನಿನ್ನೆ ಚಂದ್ರ ದರ್ಶನದ ಹಿನ್ನೆಲೆ ಇಂದು ಬೆಳಗಾವಿಯಲ್ಲಿಯೂ ರಮಜಾನ್ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ನಗರದ ಅಂಜುಮನ್-ಎ-ಇಸ್ಲಾಂನ ಈದ್ಗಾ ಮೈದಾನದಲ್ಲಿಯೂ ಸಾಮೂಹಿಕ ನಮಾಜ್ ಅದಾ ಮಾಡಲಾಯಿತು. ನಯೀಮ್ ಖತೀಬ್ ಅವರು ಖುತಬಾ ಪ್ರಾರ್ಥನೆ ಸಲ್ಲಿಸಿದರೇ, ಹಾಫೀಜ್ ಅಬ್ದುಲ್ ರಝಾಕ್ ಅವರು ನಮಾಜ್ ಬೋಧನೆ ಮಾಡಿದರು.
ಈ ಸಂದರ್ಭದಲ್ಲಿ ಮೌಲಾನಾ ಮುಫ್ತಿ ಅಬ್ದುಲ್ ಅಝೀಜ್, ಮಂಜೂರ್ ನೋಮಾನಿ, ಮುಫ್ತಿ ಝೋಹರ್ ಇನ್ನುಳಿದ ಧರ್ಮಗುರುಗಳು ಭಾಗಿಯಾಗಿ, ಜಗತ್ತಿಗೆ ದೇವನು ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ನೀಡಲೆಂದು ಪ್ರಾರ್ಥಿಸಿದರು.
ಈ ವೇಳೆ ಶಾಸಕರಾದ ಆಸೀಫ್ ಸೇಠ್, ಮಾಜಿ ಶಾಸಕ ಫಿರೋಜ್ ಸೇಠ್, ಫೈಜಾನ್ ಸೇಠ್, ನಗರಸೇವಕ ಮುಜಮ್ಮಿಲ್ ಢೋಣಿ ಸೇರಿದಂತೆ ಡಿಸಿಪಿ ರೋಹನ್ ಜಗದೀಶ್, ಇನ್ನುಳಿದವರು ಭಾಗಿಯಾಗಿದ್ದರು. ಶಾಸಕರಾದ ಆಸೀಫ್ ಸೇಠ್ ಮತ್ತು ಮಾಜಿ ಶಾಸಕರಾದ ಫಿರೋಜ್ ಸೇಠ್ ಅವರು ಸರ್ವರಿಗೂ ರಮಜಾನ್ ಹಬ್ಬದ ಶುಭಾಷಯಗಳನ್ನು ತಿಳಿಸಿ, ಭಗವಂತನೂ ಸಕಲ ಜಗತ್ತಿಗೆ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ನೀಡಲೆಂದು ಪ್ರಾರ್ಥಿಸಿದರು.ಅಬಾಲ ವೃದ್ಧರು ಈ ಸಾಮೂಹಿಕ ನಮಾಜ್’ಗೆ ಸಾಕ್ಷಿಯಾಗಿ ಪರಸ್ಪರ ಈದ್’ನ ಶುಭಾಷಗಳನ್ನು ವಿನಿಯೋಗಿಸಿಕೊಂಡರು.