Uncategorized

ಛತ್ರಪತಿ ಶಹಾಜಿ ಮಹಾರಾಜರ ಸಮಾಧಿ ಅಭಿವೃದ್ಧಿಗೆ ಜಂಟಿ ಹೋರಾಟ: ಕಿರಣ್ ಜಾಧವ್ ಕಾರ್ಯಕ್ಕೆ ಪ್ರಮೋದ್ ಮುತಾಲಿಕ್ ಶ್ಲಾಘನೆ*

ಛತ್ರಪತಿ ಶಹಾಜಿ ಮಹಾರಾಜರ ಸಮಾಧಿ ಅಭಿವೃದ್ಧಿಗೆ ಜಂಟಿ ಹೋರಾಟ: ಕಿರಣ್ ಜಾಧವ್ ಕಾರ್ಯಕ್ಕೆ ಪ್ರಮೋದ್ ಮುತಾಲಿಕ್ ಶ್ಲಾಘನೆ*
*ಬೆಳಗಾವಿ, ಜು. 2*: ಸ್ವರಾಜ್ಯದ ಮೂಲಪುರುಷ ಛತ್ರಪತಿ ಶಹಾಜಿ ಮಹಾರಾಜರ ಹೊದಗೆರೆ (ಔದಗಿರಿ) ಸಮಾಧಿ ಸ್ಥಳದ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡುವ ಕುರಿತು ಶ್ರೀರಾಮ ಸೇನೆ ಹಾಗೂ ಸಕಲ ಮರಾಠಾ ಸಮಾಜ ಜಂಟಿಯಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ನಿರ್ಧಾರ ಕೈಗೊಂಡಿವೆ.
ಈ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆಯ ಸಂಸ್ಥಾಪಕ ಹಾಗೂ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಸಕಲ ಮರಾಠಾ ಸಮಾಜದ ಮುಖಂಡ ಹಾಗೂ ಬಿಜೆಪಿ ನಾಯಕ ಕಿರಣ್ ಜಾಧವ್ ಅವರ ಸಂಪರ್ಕ ಕಾರ್ಯಾಲಯಕ್ಕೆ ಭೇಟಿ ನೀಡಿ ಮಹತ್ವದ ಚರ್ಚೆ ನಡೆಸಿದರು.
ಸಭೆಯಲ್ಲಿ ಹೊದಗೆರೆಯಲ್ಲಿರುವ ಛತ್ರಪತಿ ಶಹಾಜಿ ಮಹಾರಾಜರ ಸಮಾಧಿ ಸ್ಥಳದ ಅಭಿವೃದ್ಧಿ ಕಾಮಗಾರಿಗಳು ದೀರ್ಘಕಾಲದಿಂದ ಸ್ಥಗಿತಗೊಂಡಿರುವ ಬಗ್ಗೆ ಚರ್ಚಿಸಿ, ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುವ ಕುರಿತು ಸಮಾಲೋಚನೆ ನಡೆಸಲಾಯಿತು. ಈ ವಿಷಯದಲ್ಲಿ ಶ್ರೀರಾಮ ಸೇನೆ ಮತ್ತು ಸಕಲ ಮರಾಠಾ ಸಮಾಜ ಜಂಟಿಯಾಗಿ ಹೋರಾಟ ನಡೆಸುವ ಕುರಿತು ಸಹ ಅಭಿಪ್ರಾಯ ವ್ಯಕ್ತವಾಯಿತು.
ಈ ವೇಳೆ ಬೆಳಗಾವಿಯಲ್ಲಿ ಸಕಲ ಮರಾಠಾ ಸಮಾಜದ ಮೂಲಕ ನಡೆಯುತ್ತಿರುವ ಸಾಮಾಜಿಕ ಚಟುವಟಿಕೆಗಳು ಹಾಗೂ ಬಿಜೆಪಿ ನಾಯಕ ಕಿರಣ್ ಜಾಧವ್ ಅವರ ನೇತೃತ್ವದಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ಸಮಾಜಮುಖಿ ಕಾರ್ಯಗಳನ್ನು ಪ್ರಮೋದ್ ಮುತಾಲಿಕ್ ಶ್ಲಾಘಿಸಿದರು.
ಮಾತನಾಡಿದ ಪ್ರಮೋದ್ ಮುತಾಲಿಕ್, “ಬೆಳಗಾವಿಯಲ್ಲಿ ಕಿರಣ್ ಜಾಧವ್ ಹಾಗೂ ಸಕಲ ಮರಾಠಾ ಸಮಾಜ ಉತ್ತಮ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದೆ. ಛತ್ರಪತಿ ಶಹಾಜಿ ಮಹಾರಾಜರ ಸಮಾಧಿ ಸ್ಥಳದ ಅಭಿವೃದ್ಧಿ ನಮ್ಮ ಅಸ್ಮಿತೆಯ ವಿಷಯವಾಗಿದೆ. ಈ ಐತಿಹಾಸಿಕ ಸ್ಥಳದ ಕಾಯಕಲ್ಪಕ್ಕಾಗಿ ಸರ್ಕಾರದ ಮುಂದೆ ನಾವು ಒಗ್ಗಟ್ಟಿನಿಂದ ಬಲವಾದ ಬೇಡಿಕೆ ಮಂಡಿಸುತ್ತೇವೆ,” ಎಂದು ಹೇಳಿದರು.
ಕೆಲವು ದಿನಗಳ ಹಿಂದೆ ಸಕಲ ಮರಾಠಾ ಸಮಾಜದ ವತಿಯಿಂದ ಹೊದಗೆರೆಯ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ಆಗ್ರಹಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ ನಡೆದ ಈ ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಶ್ರೀರಾಮ ಸೇನೆಯ ಪದಾಧಿಕಾರಿಗಳು, ಕಾರ್ಯಕರ್ತರು, ಕಿರಣ್ ಜಾಧವ್ ಹಾಗೂ ಸಕಲ ಮರಾಠಾ ಸಮಾಜದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button