Uncategorized
ಹೆದ್ದಾರಿ ಪಕ್ಕದ ಚಹ ಅಂಗಡಿಯ ಸ್ಫೂರ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ವರೆಗೆ ಬೆಳಗಾವಿಯ ಎಂಜಿನಿಯರ್ ಸಾಧನೆ!

ಹೆದ್ದಾರಿ ಪಕ್ಕದ ಚಹ ಅಂಗಡಿಯ ಸ್ಫೂರ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ವರೆಗೆ ಬೆಳಗಾವಿಯ ಎಂಜಿನಿಯರ್ ಸಾಧನೆ!
ಬೆಳಗಾವಿ ಎಂಜಿನಿಯರ್ ಗೋಪಾಲ್ ದೇಶಪಾಂಡೆ ಸಾಧನೆ
ಕನ್ನಡದಲ್ಲಿ ಹತ್ತು ಸಾವಿರ ಸುವಿಚಾರಗಳ ಬರವಣಿಗೆ
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಹೆಸರು ದಾಖಲು
ರಸ್ತೆ ಬದಿಯ ಚಹ ಅಂಗಡಿಯಿಂದ ಸಿಕ್ಕ ಪ್ರೇರಣೆ
ಬೆಳಗಾವಿ: ನ್ಯಾಶನಲ್ ಹೈವೇ ಪಕ್ಕದ ಚಹ ಅಂಗಡಿಯಲ್ಲಿ ಬರೆದಿದ್ದ ಒಳ್ಳೆಯ ವಿಚಾರದ ಬರಹದಿಂದ ಸ್ಫೂರ್ತಿ ಪಡೆದುಕೊಂಡು, ಬರೆಯಲು ಶುರು ಮಾಡಿದ ಹವ್ಯಾಸವೊಂದು ಬೆಳಗಾವಿ ಎಂಜಿನಿಯರ್ ಒಬ್ಬರಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಬರೆಯುವಂತೆ ಮಾಡಿದೆ. ಸತತ ಮೂರು ವರ್ಷ ಬರೊಬ್ಬರಿ 10 ಸಾವಿರ ಒಳ್ಳೆಯ ವಿಚಾರಗಳು, ಪ್ರೇರಣಾದಾಯಿ ಹೇಳಿಕೆಗಳನ್ನು ಕನ್ನಡದಲ್ಲೆ ಬರೆದು, ಇಡೀ ರಾಷ್ಟ್ರದ ಗಮನ ಸೆಳೆದಿದ್ದಾರೆ.
ಬೆಳಗಾವಿ ಗೂಡ್ ಶೇಡ್ ರಸ್ತೆಯ ನಿವಾಸಿ ಗೋಪಾಲ ರಂಗರಾವ ದೇಶಪಾಂಡೆ ಅವರೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತಮ್ಮ ಹೆಸರು ದಾಖಲಿಸಿಕೊಂಡವರು. ಮೂಲತಃ ಬೆಳಗಾವಿ ತಾಲೂಕಿನ ಹುದಲಿ ಗ್ರಾಮದವರಾದ ಗೋಪಾಲ, ತಮ್ಮ ಸ್ವಗ್ರಾಮದ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಎಸ್ಎಸ್ಎಲ್ಸಿವರೆಗೆ ಶಿಕ್ಷಣ ಪಡೆದು, ಬಳಿಕ ಬೆಳಗಾವಿ ಸರ್ಕಾರಿ ಡಿಪ್ಲೋಮಾ ಕಾಲೇಜಿನಲ್ಲಿ ಮೆಕ್ಯಾನಿಕ್ ಎಂಜಿನಿಯರ್ ಪದವಿ ಪೂರ್ಣಗೊಳಿಸಿದ್ದಾರೆ. ಮುಂದೆ ಮಚ್ಛೆ ಗ್ರಾಮದ ಬಳಿ ಇರುವ ಪಾಲಿ ಹೈಡ್ರಾನ್ ಸಮೂಹದ ಹೈಲಾಕ್ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿ, ಕಳೆದ 35 ವರ್ಷಗಳಿಂದ ಗೋಪಾಲ್ ಅವರು, ಅಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ತಮ್ಮ ಪ್ರತಿಭೆ ಮೂಲಕ ಸದ್ಯ ಮುಖ್ಯ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ಹಾಗೂ ಐಎಸ್ಒ ಸಮಿತಿಯ ಫ್ಲೂಯಿಡ್ ಪವರ್ ವಿಭಾಗದ ಕ್ರಿಯಾಶೀಲ ಸದಸ್ಯರೂ ಆಗಿದ್ದಾರೆ. ವೃತ್ತಿಯಲ್ಲಿ ಉನ್ನತ ಸ್ಥಾನದಲ್ಲಿದ್ದರೂ ಕನ್ನಡ ಭಾಷೆ ಮೇಲಿನ ಅವರ ಪ್ರೀತಿ ಮಾತ್ರ ಕಮ್ಮಿ ಆಗಿಲ್ಲ. ಈಗ ಅದೇ ಪ್ರೀತಿ ಅವರನ್ನು ಸಾಧನೆಯ ಶಿಖರವನ್ನು ಏರಿಸಿದೆ.
ಇನ್ ನ್ಯೂಸ್’ನೊಮದಿಗೆ ಮಾತನಾಡಿದ ಗೋಪಾಲ್ ದೇಶಪಾಂಡೆ, ಒಂದು ದಿನ 2023ರಲ್ಲಿ ಕಾರಿನಲ್ಲಿ ಬೆಂಗಳೂರಿಗೆ ಹೋಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಅಂಗಡಿಗೆ ಚಹ ಕುಡಿಯಲು ಹೋಗಿದ್ದೆ. ಆ ಅಂಗಡಿಯ ಫಲಕವೊಂದರಲ್ಲಿ ಬರೆದಿದ್ದ ಸುವಿಚಾರದ ಕಡೆ ನನ್ನ ಲಕ್ಷ್ಯ ಹೋಯಿತು. ಕೂಡಲೇ ಮಾಲೀಕರನ್ನು ವಿಚಾರಿಸಿದಾಗ, ಅವರು ಪ್ರತಿದಿನ ಒಂದೊಂದು ಒಳ್ಳೆಯ ವಿಚಾರ ಬರೆಯುವುದಾಗಿ ತಿಳಿಸಿದರು. ನಾನು ಯಾಕೆ ಸುವಿಚಾರಗಳನ್ನೆ ಬರೆಯಬಾರದು ಅಂತಾ ನಿರ್ಧರಿಸಿ, ಅದನ್ನೆ ಸ್ಫೂರ್ತಿ ಆಗಿ ಪಡೆದುಕೊಂಡು ನನ್ನ ಬರೆಯುವ ಪಯಣ ಆರಂಭಿಸಿದೆ ಎಂದು ವಿವರಿಸಿದರು.ಎಐ ಮುಂದೆ ಇಂದಿನ ಯುವಕರಲ್ಲಿ ವಿಚಾರ ಶಕ್ತಿಯೇ ಕಡಿಮೆ ಆಗುತ್ತಿದೆ. ಎಲ್ಲದಕ್ಕೂ ಚಾಟ್ ಜಿಪಿಟಿಯನ್ನೆ ಅವಲಂಬಿಸುವಂತಾಗಿದೆ. ಅದರಲ್ಲಿನ ವಿಷಯ ಸರಿ ಇದೆಯೇ..? ಇಲ್ಲವೇ..? ಎಂಬುದನ್ನು ನೋಡುವ ವ್ಯವದಾನವೂ ಇಲ್ಲದಂತಾಗಿದೆ. ಹಾಗಾಗಿ, ಯುವಕರು ಮತ್ತು ವಿದ್ಯಾರ್ಥಿಗಳು ಓದುವ ಹಂಬಲ ಬೆಳೆಸಿಕೊಳ್ಳಬೇಕು ಎಂದು ಗೋಪಾಲ್ ದೇಶಪಾಂಡೆ ಕಿವಿಮಾತು. ಬೈಟ್
6 ಡೈರಿಗಳ 1,430 ಪುಟಗಳ ಕೈಬರಹದ ಸಂಗ್ರಹವನ್ನು ಸ್ಕ್ಯಾನ್ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಗೆ ಕಳುಹಿಸಿದ್ದಾರೆ. ಇದನ್ನು ಪರಿಶೀಲಿಸಿ, ಸಂದರ್ಶನ ಮಾಡಿದ ಬಳಿಕ ಹೀಗೆ ಕನ್ನಡ ಭಾಷೆಯಲ್ಲಿ 10 ಸಾವಿರ ಒಳ್ಳೆಯ ವಿಚಾರಗಳನ್ನು ಬರೆದವರು ನೀವೊಬ್ಬರೆ ಅಂತಾ ಹೇಳಿ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಅವರ ಹೆಸರು ಸೇರಿಸಲಾಗಿದೆ.



