Uncategorized

ನಿನ್ನಗೆ ದೋಷವಿದೆ ಎಂದು ಗರ್ಭಿಣಿ ಮಹಿಳೆಗೆ ಹೆದರಿಸಿ ಹಣ, ಚಿನ್ನಾಭರಣ ದೋಚಿ ನಕಲಿ ಬುಡುಬುಡುಕೆ ಪರಾರಿ

ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಸ್ವಾಮೀಜಿಗಳ ಸೋಗಿನಲ್ಲಿ ಬಂದ ಖದೀಮರು ಆಶಿರ್ವಾದ ಮಾಡುವ ನೆಪದಲ್ಲಿ ವ್ಯಕ್ತಿಯ ಚಿನ್ನದ ಉಂಗುರವನ್ನು ಕದ್ದು ಪರಾರಿಯಾಗಿದ್ದ ಘಟನೆ ನಡೆದಿತ್ತು. ಆ ಘಟನೆ ಮಾಶುವ ಮುನ್ನವೇ ಇದೀಗ ಬುಡುಬುಡುಕೆ ಸ್ವಾಮೀಜಿ ವೇಷದಲ್ಲಿ ಬಂದ ಖದೀಮನೊಬ್ಬ, ಗರ್ಭಿಣಿಯನ್ನು ʼನಿಮ್ಮ ಮನೆಗೆ ದೋಷವಿದೆ, ಸಾವಿನ ಕಂಟಕ ಇದೆʼ ಎಂದು ಹೆದರಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹೆಗ್ಗಡದೇವನಪುರದಲ್ಲಿ ನಡೆದಿದೆ.

ಮೋಹನ್ ಎಂಬುವರ ಮನೆಗೆ ಬಂದ ಬುಡುಬುಡುಕೆ ವೇಷದಲ್ಲಿದ್ದ ವ್ಯಕ್ತಿ, ಅವರ ಪತ್ನಿ ಉಷಾ ಎಂಟು ತಿಂಗಳ ಗರ್ಭಿಣಿಯಾಗಿರುವುದನ್ನು ಗಮನಿಸಿ, ಮನೆಗೆ ದೋಷವಿದೆ ಎಂದು ನಂಬಿಸಿದ್ದಾನೆ. ನನಗೆ ಹಣ ಬೇಡ, ಉಚಿತವಾಗಿ ಪೂಜೆ ಮಾಡುತ್ತೇನೆ ಎಂದು ಹೇಳಿ ಮನೆಯೊಳಗೆ ಪ್ರವೇಶಿಸಿದ್ದಾನೆ. ಪೂಜೆಗಾಗಿ ಒಂದು ಕುಡಿಕೆಯಲ್ಲಿ ಮನೆಯಲ್ಲಿದ್ದ ಚಿನ್ನಾಭರಣ ಹಾಕಿದರೆ ಇನ್ನಷ್ಟು ಐಶ್ವರ್ಯ ಬರುತ್ತದೆ ಎಂದು ದಂಪತಿಯನ್ನು ನಂಬಿಸಿದ್ದಾನೆ. ಅದರಂತೆ ಉಷಾ ತಮ್ಮ ಕಿವಿಯೋಲೆ, ಉಂಗುರ ಸೇರಿದಂತೆ ಚಿನ್ನಾಭರಣವನ್ನು ಕುಡಿಕೆಯಲ್ಲಿ ಹಾಕಿದ್ದಾರೆ.

ಆ ನಂತರ ನೀರು ತರುವ ನೆಪದಲ್ಲಿ ಕುಡಿಕೆಯನ್ನು ಬದಲಾಯಿಸಿದ ಖದೀಮ, ಮತ್ತೊಂದು ವಸ್ತು ನೀಡಿ ಅದನ್ನು ಕೆರೆಗೆ ಬಿಟ್ಟು ಬರಲು ಹೇಳಿದ್ದಾನೆ. ದಂಪತಿ ಮನೆಗೆ ಮರಳುವಷ್ಟರಲ್ಲಿ ಸುಮಾರು 1.20 ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ ಆರೋಪಿ ಪರಾರಿಯಾಗಿದ್ದಾನೆ. ಮನೆಗೆ ಬಂದ ದಂಪತಿಗೆ ವ್ಯಕ್ತಿ ನಾಪತ್ತೆಯಾಗಿರುವುದರ ಜೊತೆಗೆ ಚಿನ್ನಾಭರಣಗಳನ್ನೂ ತೆಗೆದುಕೊಂಡು ಹೋಗಿರುವುದನ್ನು ಕಂಡು ಶಾಕ್ ಆಗಿದ್ದಾರೆ. ದಂಪತಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಯ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಆತನ ಪತ್ತೆಗೆ ಬಲೆ ಬೀಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button