Uncategorized
ಬೆಳಗಾವಿಯಲ್ಲಿ ಜನಕಲ್ಯಾಣ ಟ್ರಸ್ಟ್ ವತಿಯಿಂದ ಆಯೋಜಿಸಿದ ಶ್ರೀ ಜಗನ್ನಾಥರಾವ್ ಜೋಶಿ ಸ್ಮಾರಕ ಭವನ ಲೋಕಾರ್ಪಣ ಸಮಾರಂಭ ಜರುಗಿತು

ಬೆಳಗಾವಿಯಲ್ಲಿ ಜನಕಲ್ಯಾಣ ಟ್ರಸ್ಟ್ ವತಿಯಿಂದ ಆಯೋಜಿಸಿದ ಶ್ರೀ ಜಗನ್ನಾಥರಾವ್ ಜೋಶಿ ಸ್ಮಾರಕ ಭವನ ಲೋಕಾರ್ಪಣ ಸಮಾರಂಭ ಜರುಗಿತು.
ಧಾರವಾಡ ಜಿಲ್ಲೆಯ ನರಗುಂದದಲ್ಲಿ ಜನಿಸಿ, ದೇಶಸೇವೆಗೆ ಧುಮುಕಿದ ಜೋಶಿಯವರು ಬೆಳಗಾವಿಯಿಂದ ಸಂಘದ ಪ್ರಚಾರಕರಾಗಿ ಸಮಾಜವನ್ನು ಸಂಘಟಿಸಿದವರು. ರಾಷ್ಟ್ರಭಕ್ತಿ, ನಿಸ್ವಾರ್ಥ ಸೇವೆ ಹಾಗೂ ಸಂಘಟನಾ ಸಾಮರ್ಥ್ಯದ ಮೂಲಕ ಸಾರ್ವಜನಿಕ ಜೀವನದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಶ್ರೀ ಜಗನ್ನಾಥರಾವ್ ಜೋಶಿಯವರ ಆದರ್ಶಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಿಯಾಗಿವೆ. ಅವರ ಸ್ಮರಣಾರ್ಥ ನಿರ್ಮಿಸಲಾದ ಈ ಭವನವು ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಷ್ಟ್ರಚಿಂತನೆಯ ಚಟುವಟಿಕೆಗಳಿಗೆ ಪ್ರೇರಣಾ ಕೇಂದ್ರವಾಗಲಿದೆ.
ಈ ಕಾರ್ಯಕ್ರಮದಲ್ಲಿ ಬೆಳಗಾವಿ ಕಾರಂಜಿಮಠದ ಪ.ಪೂ.ಶ್ರೀ ಮು.ನಿ.ಪ್ರ. ಗುರುಸಿದ್ದ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ಮಾನ್ಯ ಶ್ರೀ ದತ್ತಾತ್ರೇಯ ಹೊಸಬಾಳೆ, ಪ್ರಾಂತ ಸಂಘಚಾಲಕರಾದ ಶ್ರೀ ಬಸವರಾಜ ಡಂಬಳ, ಜನ ಕಲ್ಯಾಣ ಟ್ರಸ್ಟನ ನಿರ್ವಾಹಕ ವಿಶ್ವಸ್ಥರಾದ ಶ್ರೀ ಅರವಿಂದರಾವ್ ದೇಶಪಾಂಡೆ, ಕೇಂದ್ರ ಸಚಿವರು, ಸಂಸದರು, ಶಾಸಕರು, ಮಾಜಿ ಮುಖ್ಯಮಂತ್ರಿಗಳು, ಮಾಜಿ ಸಚಿವರು, ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಸಂಘದ ಹಿರಿಯ ಹಾಗೂ ಪ್ರಮುಖ ಸ್ವಯಂ ಸೇವಕರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.



