Uncategorized
ಕಾನೂನು ಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಪೊಲೀಸರು ಭರ್ಜರಿ ಕಾರ್ಯಾಚರಣೆ ನ

ಬೆಳಗಾವಿ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಹೊಸದಾಗಿ ರಚಿಸಲಾದ ರೌಡಿ ನಿಗ್ರಹ ದಳವು ನಗರದ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿ, ಮಾರಕಾಸ್ತ್ರಗಳನ್ನು ಹೊಂದಿದ್ದ ರೌಡಿಶೀಟರ್ಗಳನ್ನು ಹೆಡೆಮುರಿ ಕಟ್ಟಿದೆ.
ಬೆಳಗಾವಿ ಡಿಸಿಸಿ ನಾರಾಯಣ ಬರಮನಿ ಅವರ ನೇತೃತ್ವದ “ರೌಡಿ ನಿಗ್ರಹ ದಳ” ತಂಡವು ಜೂನ್ 19 ರಂದು ನಗರದಾದ್ಯಂತ ವಿಶೇಷ ಮುಂಜಾಗ್ರತಾ ಕಾರ್ಯಾಚರಣೆ ಹಮ್ಮಿಕೊಂಡಿತ್ತು. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ತಹಶೀಲ್ದಾರ್ ಗಲ್ಲಿಯಲ್ಲಿ ತಲವಾರ್ ಹಾಗೂ ಹುಲಿ ಉಗುರು ಹೊಂದಿದ್ದ ಗೌರಂಗ್ ಗೆಂಜಿ (33) ಮತ್ತು ಬಾಂದುರ ಗಲ್ಲಿಯಲ್ಲಿ ಕುಡಗೋಲು ಇಟ್ಟುಕೊಂಡಿದ್ದ ಶ್ರೀಧರ ಗೆಂಜಿ (31) ಎಂಬ ರೌಡಿಶೀಟರ್ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇವರ ಬಳಿಯಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮತ್ತೊಂದೆಡೆ ತಿಲಕವಾಡಿ ಮತ್ತು ಹಿರೇಬಾಗೇವಾಡಿ ವ್ಯಾಪ್ತಿಯಲ್ಲಿ ಸ್ಕೂಟರ್ನಲ್ಲಿ ಕೊಯ್ತಾ ಹಾಗೂ ತಲವಾರ್ ಹಿಡಿದು ಸಾರ್ವಜನಿಕವಾಗಿ ತಿರುಗಾಡುತ್ತಿದ್ದ ಶ್ರವಣ ಸಂತೋಷ್ ಶಿವೇಕರ್ ಮತ್ತು ಹಸನಸಾಬ್ ಮುಲ್ಲಾ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಇದೇ ವೇಳೆ ಬೆಳಗಾವಿ ಗ್ರಾಮೀಣ ಠಾಣಾ ವ್ಯಾಪ್ತಿಯ ನಂದಿಹಳ್ಳಿ ಜಾಧವ ಗಲ್ಲಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ರೌಡಿಶೀಟರ್ ದೇವಪ್ಪ ಲೋಕುರೆ (50) ಎಂಬಾತನ ಮೇಲೆ ದಾಳಿ ನಡೆಸಿ, ಸುಮಾರು 5.670 ಲೀಟರ್ ಅಕ್ರಮ ಮದ್ಯವನ್ನು ಜಪ್ತಿ ಮಾಡಲಾಗಿದೆ. ಈ ಯಶಸ್ವಿ ಕಾರ್ಯಾಚರಣೆಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.



