Uncategorized
ಬೆಚ್ಚಿಬೀಳಿಸೋ ಘಟನೆ: 25 ವರ್ಷದ ಸಂಸಾರದ ಅಂತ್ಯ ತಂದ ಕ್ರೌರ್ಯ!

ಮೈಸೂರಿನಲ್ಲಿ ಬೆಚ್ಚಿಬೀಳಿಸೋ ಘಟನೆ: 25 ವರ್ಷದ ಸಂಸಾರದ ಅಂತ್ಯ ತಂದ ಕ್ರೌರ್ಯ!
ಮದುವೆಯಾಗಿ ಕಾಲು ಶತಮಾನ ಕಳೆದಿದ್ದ ಆ ದಂಪತಿಗಳ ಮಧ್ಯೆ ಪ್ರೀತಿ ಇರಬೇಕಿತ್ತಲ್ಲವೇ? ಆದರೆ ಅಲ್ಲಿ ಜಗಳ, ಆಸ್ತಿ ಹಪಾಹಪಿ ಮತ್ತು ತೀವ್ರ ಅಸಮಾಧಾನ ತಾಂಡವವಾಡುತ್ತಿತ್ತು.
ಕೊನೆಗೊಂದು ದಿನ “ಮಕ್ಕಳಾಗಿಲ್ಲ” ಅನ್ನೋ ಹತಾಶೆ ಮತ್ತು ಗಂಡನ ಕುಡಿತದ ಚಟ, ಆ ಹೆಂಡತಿಯನ್ನು ರಾಕ್ಷಸಿಯಾಗಿಸಿಬಿಟ್ಟಿತು. ಕುಡಿದ ನಶೆಯಲ್ಲಿ ಮಲಗಿದ್ದ ಗಂಡನನ್ನೇ ಹಗ್ಗದಿಂದ ಬಿಗಿದು ಕೊಂದ ಶಿಕ್ಷಕಿಯೊಬ್ಬಳ ಭೀಕರ ಕಥೆಯಿದು!
ಕೊಲೆಗೀಡಾದ ವ್ಯಕ್ತಿಯನ್ನು 50 ವರ್ಷದ ನಿತ್ಯಾನಂದ ಎಂದು ಗುರುತಿಸಲಾಗಿದೆ. ಇವರ ಪತ್ನಿ ಸುಶೀಲಾ ಖಾಸಗಿ ಶಾಲೆಯೊಂದರಲ್ಲಿ ಟೀಚರ್ ಆಗಿದ್ದರು. ಸದಾ ಜಗಳವಾಡುತ್ತಿದ್ದ ಈ ದಂಪತಿಗಳ ಮನೆಯಲ್ಲಿ ಅಂದು ನಡೆದಿದ್ದೇ ಬೇರೆ. ಕಂಠಪೂರ್ತಿ ಕುಡಿದು ಬಂದು ಮಲಗಿದ್ದ ನಿತ್ಯಾನಂದನನ್ನು ಸುಶೀಲಾ ನಡುರಾತ್ರಿಯಲ್ಲಿ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ.
ವಿಚಿತ್ರವೆಂದರೆ, ಕೊಲೆ ಮಾಡಿದ ಬಳಿಕ ಇಡೀ ರಾತ್ರಿ ಗಂಡನ ಹೆಣದ ಪಕ್ಕದಲ್ಲೇ ಕೂತಿದ್ದಾಳೆ. ಬೆಳಗಾಗುತ್ತಿದ್ದಂತೆ ವಿಷಯ ಯಾರಿಗೂ ತಿಳಿಯಬಾರದೆಂದು ನಿತ್ಯಾನಂದನ ಅಣ್ಣನಿಗೆ ಫೋನ್ ಮಾಡಿ, “ನಿಮ್ಮ ತಮ್ಮನಿಗೆ ಸಡನ್ ಆಗಿ ಹಾರ್ಟ್ ಅಟ್ಯಾಕ್ ಆಯ್ತು, ತೀರಿಕೊಂಡ್ರು” ಅಂತ ಅಳುತ್ತಾ ನಾಟಕವಾಡಿದ್ದಾಳೆ.
ಅಣ್ಣನ ಸಾವಿನ ಸುದ್ದಿ ಕೇಳಿ ಓಡೋಡಿ ಬಂದ ಸಹೋದರನಿಗೆ ಮೃತದೇಹ ನೋಡಿದ ತಕ್ಷಣವೇ ಏನೋ ಎಡವಟ್ಟಾಗಿದೆ ಅನ್ನೋದು ಕನ್ಫರ್ಮ್ ಆಗಿತ್ತು. ಏಕೆಂದರೆ ನಿತ್ಯಾನಂದನ ಕುತ್ತಿಗೆಯ ಸುತ್ತಲೂ ಕಪ್ಪಗಿನ ಗಾಯದ ಗುರುತುಗಳಿದ್ದವು. ತಕ್ಷಣವೇ ಅಲರ್ಟ್ ಆದ ಸಹೋದರ ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಸುಶೀಲಾಳನ್ನು ತನಿಖೆಗೆ ಒಳಪಡಿಸಿದಾಗ ಆಕೆ ಆಡಿದ ನಾಟಕವೆಲ್ಲಾ ಉಲ್ಟಾ ಹೊಡೆದಿದೆ. ಗಂಡನ ಕಾಟ ತಡೆಯಲಾರದೆ ತಾನೇ ಕುತ್ತಿಗೆ ಹಿಸುಕಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಸದ್ಯ ಪೊಲೀಸರು ಆಕೆಯನ್ನು ಅರೆಸ್ಟ್ ಮಾಡಿದ್ದು, ಈ ಕೊಲೆಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರಾ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ.



