Uncategorized

ಮಳೆಗಾಗಿ ಕತ್ತೆ ಹಾಗೂ ಕಪ್ಪೆಗಳ ಮದುವೆ ಮಾಡಿಸುವ ಮೂಲಕ ವಿಶೇಷ ಪೂಜೆ

ಧಾರವಾಡ: ಮಳೆಯ ಕೊರತೆಯಿಂದ ರೈತರು ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರು ಗ್ರಾಮದಲ್ಲಿ ಕತ್ತೆ ಹಾಗೂ ಕಪ್ಪೆಗಳ ಮದುವೆ ಮಾಡಿಸುವ ಮೂಲಕ ವಿಶೇಷ ಪೂಜೆ ನೆರವೇರಿಸಲಾಗಿದೆ.

ಗ್ರಾಮಸ್ಥರು ಗಂಡು ಕತ್ತೆಗೆ `ಕಾಂತೇಶ್’ ಹಾಗೂ ಹೆಣ್ಣು ಕತ್ತೆಗೆ `ಕಸ್ತೂರಿ’ ಎಂದು ಹೆಸರಿಟ್ಟು ಹಿಂದೂ ಸಂಪ್ರದಾಯದಂತೆ ಅದ್ದೂರಿಯಾಗಿ ವಿವಾಹ ನೆರವೇರಿಸಿದರು. ಮದುವೆಗೆ ಮುನ್ನ ದೇವಕಾರ್ಯ ನಡೆಸಿ, ನಂತರ ಶಾಸ್ತ್ರೋಕ್ತವಾಗಿ ಮದುವೆ ಮಾಡಲಾಯಿತು.

ಕತ್ತೆಗಳ ಜೊತೆಗೆ ಎರಡು ಕಪ್ಪೆಗಳಿಗೂ ಸಂಪ್ರದಾಯಬದ್ಧವಾಗಿ ಮದುವೆ ಮಾಡಿಸಲಾಯಿತು. ಮದುವೆಗಾಗಿ ಪೆಂಡಾಲ್, ವೇದಿಕೆ, ಬ್ಯಾಂಡ್, ಬಾಸಿಂಗ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು. ಮನುಷ್ಯರ ಮದುವೆಯಂತೆ ಗ್ರಾಮಸ್ಥರು ಸಂಭ್ರಮದಿಂದ ಭಾಗವಹಿಸಿ ಮದುವೆ ನಡೆಸಿದರು.

ಗ್ರಾಮದ ಮಹಿಳೆಯರು ಮತ್ತು ಮುತ್ತೈದೆಯರು ಮದುವೆ ಸಂಭ್ರಮದಲ್ಲಿ ಪಾಲ್ಗೊಂಡು ಸೋಬಾನೆ ಹಾಡಿದರು. ನವವಧು-ವರರಿಗೆ ಸಂಪ್ರದಾಯದಂತೆ ಸುರಿಗೆ ನೀರು ಹಾಕಿ ಆಶೀರ್ವದಿಸಿದರು. ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಮದುವೆಯ ಬಳಿಕ ಗ್ರಾಮಸ್ಥರಿಗೆ ಅಂಬಲಿ, ಕಿಚಡಿ, ಅನ್ನ ಹಾಗೂ ಸಾಂಬಾರ್ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಬೆಳಿಗ್ಗೆ ಉಪಾಹಾರದ ವ್ಯವಸ್ಥೆಯನ್ನೂ ಗ್ರಾಮಸ್ಥರು ಮಾಡಿಕೊಂಡಿದ್ದರು. ಕತ್ತೆ ಹಾಗೂ ಕಪ್ಪೆಗಳ ಮದುವೆ ಮಾಡಿದರೆ ಮಳೆಯಾಗುತ್ತದೆ ಎಂಬ ನಂಬಿಕೆ ಗ್ರಾಮೀಣ ಪ್ರದೇಶಗಳಲ್ಲಿ ಹಿಂದಿನಿಂದಲೂ ಇದೆ. ಅದೇ ನಂಬಿಕೆಯಿಂದ ಶಿರೂರು ಗ್ರಾಮಸ್ಥರು ಈ ವಿಶೇಷ ಆಚರಣೆ ನಡೆಸಿದ್ದು, ಮಳೆರಾಯ ಕಣ್ತೆರೆಯಲಿ ಎಂದು ಪ್ರಾರ್ಥಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button