Uncategorized
ಚರಂಡಿ ನೀರು ಬಿಡುವ ಸಣ್ಣ ಜಗಳಕ್ಕೆ ಪಕ್ಕದ ಸಲಕಿಯಿಂದ ಹೊಡೆದು ಭೀಕರ ಕೊಲೆ!

ಖಾನಾಪುರ: ಚರಂಡಿ ನೀರು ಬಿಡುವ ಸಣ್ಣ ಜಗಳಕ್ಕೆ ಪಕ್ಕದ ಸಲಕಿಯಿಂದ ಹೊಡೆದು ಭೀಕರ ಕೊಲೆ!
ಖಾನಾಪುರ ತಾಲೂಕಿನಲ್ಲಿ ಚರಂಡಿ ನೀರು ಬಿಡುವ ಒಂದು ಸಣ್ಣ ವಿಚಾರ ಕೊಲೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪಕ್ಕದ ಮನೆಯವರ ನಡುವೆ ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ವಿಕೋಪಕ್ಕೆ ತಿರುಗಿ, ವ್ಯಕ್ತಿಯೊಬ್ಬನ ಎದೆಗೇ ಸಲಕಿಯಿಂದ ಹೊಡೆದು ಅಮಾನುಷವಾಗಿ ಹತ್ಯೆ ಮಾಡಲಾಗಿದೆ.
ಖಾನಾಪುರ ತಾಲೂಕಿನ ತೋಲಗಿ ಗ್ರಾಮದಲ್ಲಿ ಚರಂಡಿ ನೀರು ಬಿಡುವ ವಿಷಯಕ್ಕೆ ಸಂಬಂಧಿಸಿದಂತೆ ನೆರೆಹೊರೆಯವರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಗ್ರಾಮದ ಅಮೀರ್ ಮಕ್ತುಮ್ ಹುಸೇನ್ ಪಾಶ್ಘಾಪೂರ್ ಹಾಗೂ ಪಕ್ಕದ ಮನೆಯ ಅಶೋಕ್ ರಾಮಪ್ಪ ಉಗರಕೋಡ್ ಎಂಬುವವರ ಮಧ್ಯೆ ಚರಂಡಿ ನೀರು ಹರಿಸುವ ವಿಚಾರವಾಗಿ ಗಲಾಟೆ ಆರಂಭವಾಗಿದೆ. ಈ ಜಗಳ ತೀವ್ರ ವಿಕೋಪಕ್ಕೆ ತೆರಳಿದಾಗ, ಆಕ್ರೋಶಗೊಂಡ ಅಶೋಕ್ ಉಗರಕೋಡ್ ಸಲಕಿ (ಪಿಕಾಸಿ)ಯಿಂದ ಅಮೀರ್ ಅವರ ಎದೆಯ ಭಾಗಕ್ಕೆ ಬಲವಾಗಿ ಹೊಡೆದಿದ್ದಾನೆ.
ಪೆಟ್ಟಿನ ಭೀಕರತೆಗೆ ಎದೆಯಿಂದ ರಕ್ತ ಚಿಮ್ಮಿ ಅಮೀರ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ನಂದಗಡ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ತಕ್ಷಣವೇ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮೃತರ ಕುಟುಂಬಸ್ಥರು ನಂದಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ಮುಂದುವರಿದಿದೆ.



